ಬೆಳ್ತಂಗಡಿ: ದೌರ್ಜನ್ಯ ವಿರುದ್ಧ ಸೌಜನ್ಯ: ಆ.26 ರಿಂದ ಬೆಳ್ತಂಗಡಿ – ಬೆಂಗಳೂರಿಗೆ KRS ಪಕ್ಷದ ಪಾದಾಯಾತ್ರೆ
![ಬೆಳ್ತಂಗಡಿ: ದೌರ್ಜನ್ಯ ವಿರುದ್ಧ ಸೌಜನ್ಯ: ಆ.26 ರಿಂದ ಬೆಳ್ತಂಗಡಿ – ಬೆಂಗಳೂರಿಗೆ KRS ಪಕ್ಷದ ಪಾದಾಯಾತ್ರೆ](https://namanachannel.in/wp-content/uploads/2023/08/IMG_20230824_112626-850x560.jpg)
ಬೆಳ್ತಂಗಡಿ: ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಆಗ್ರಹಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ಜರುಗುತ್ತಿದೆ. ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ನ್ಯಾಯಸಿಗುವಂತಾಗಲು ಮತ್ತು ಅಪರಾಧ ಕೃತ್ಯ ಎಸಗಿದವರು ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಿರುತ್ತೇಜಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ, ಮತ್ತು ಆ ವಿಚಾರವಾಗಿ ಸಮಾಜದಲ್ಲಿ ಜನಾಭಿಪ್ರಾಯ ರೂಪಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣ ರೆಡ್ಡಿಯವರ ನೇತೃತ್ವದಲ್ಲಿ ಆಗಸ್ಟ್ 26 ರಂದು ಬೆಳ್ತಂಗಡಿ ಯಿಂದ ಆರಂಭಿಸಿ ಧರ್ಮಸ್ಥಳದ ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸೆ.7 ರಂದು ಬೆಂಗಳೂರು ತಲುಪಲಿದ್ದು ಸೆ.8 ರಂದು ವಿಧಾನ ಸೌಧ ತಲುಪಲಿದ್ದೇವೆ. 14 ದಿನಗಳ ಕಾಲ ನಡೆಯಲಿರುವ 330 ಕಿಲೋ ಮೀಟರ್ಗಳ ಪಾದಯಾತ್ರೆಯಲ್ಲಿ ಕೆ ಆರ್ ಎಸ್ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ ಎಂದು ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಪೇರೇರಾ ಹೇಳಿದರು.
ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಪಾದಯಾತ್ರೆಯಲ್ಲಿ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ರಾಜ್ಯದ ಎಲ್ಲಾ ಪ್ರಜ್ಞಾವಂತ ಸಾರ್ವಜನಿಕರು ಭಾಗವಹಿಸುವಂತೆ ಕೆಆರ್ ಎಸ್ ಪಕ್ಷ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಕಾಶ್, ಯಶೋಧ ಉಪಸ್ಥಿತರಿದ್ದರು.