ಡಿಕೆ.ಆರ್.ಡಿ.ಎಸ್ ಬೆಳ್ತಂಗಡಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ, ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ನಡುಜಾರು , ಅಂಗನವಾಡಿ ಕೇಂದ್ರ ನಡುಜಾರು ಇವುಗಳ ಆಶ್ರಯದಲ್ಲಿ ಬಹು ಉಪಯುಕ್ತವಾದ ಲಕ್ಷ್ಮಣಫಲ ಗಿಡವನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರವನ್ನು ಜು. 23 ರಂದು ನಡುಜಾರು ಶಾಲೆಯಲ್ಲಿ ಆಚರಿಸಲಾಯಿತು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಏ. ಜೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ”ಇಷ್ಟು ದಿನ ಮಾನವ ಹಲವು ರೀತಿಯಲ್ಲಿ ಪರಿಸರದ ವಿರುದ್ಧವೇ ವರ್ತಿಸಿದ್ದಾರೆ, ಆದರೆ ಇನ್ನುಮುಂದೆ ಪರಿಸರ ಸಂರಕ್ಷಣೆಗಾಗಿ ತನ್ನ ವರ್ತನೆಯ ವಿರುದ್ಧವೇ ವರ್ತಿಸಬೇಕಾಗಿದೆ” ಎನ್ನುವ ನುಡಿಯೊಂದಿಗೆ ವನಮಹೋತ್ಸವ ಕಾರ್ಯಕ್ರಮದ ಅರಿವು ಮೂಡಿಸಿದರು.
ಶಾಲಾ ಎಸ್.ಡಿ.ಎಮ್. ಸಿ ಅಧ್ಯಕ್ಷರಾದ ಕೆಂಪಯ್ಯರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಡಿ ಕೆ ಆರ್ ಡಿ ಎಸ್ ಸಂಸ್ಥೆಯ ಕಾರ್ಯಕರ್ತರಾದ ಮಾರ್ಕ್ ಡಿಸೋಜಾ ರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾಲತಾ ಸ್ವಾಗತಿಸಿ, ಶ್ರೀಮತಿ ಉಮಾವತಿ ಇವರು ಕಾರ್ಯಕ್ರಮವನ್ನು ನಿರೂಪಿಸಿಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ವಂದಿಸಿದರು. ಶಾಲೆಯ ಪುಟಾಣಿ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಶಾಲಾ ವಠಾರದಲ್ಲಿ ಸಾಂಕೇತಿಕವಾಗಿ ಗಿಡವನ್ನು ನೆಟ್ಟು ಪ್ರತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಕ್ಷ್ಮಣಫಲ ಗಿಡವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿ ಬಳಗದವರು, ಹಾಗೂ ಪೋಷಕ ವೃಂದದವರು ಭಾಗವಹಿಸಿದ್ದರು.